________________
೮೬
ಯಶೋಧರ ಚರಿತೆ ೨೯. ಯಶೌಘನು ಚಂದ್ರಮತಿಯನ್ನು ಅಂಗರಕ್ಷಕರಂತೆ ನೋಡಿಕೊಳ್ಳುತ್ತಿದ್ದನೆಂದೂ ಅವನ ಸಂತುಷ್ಟ ಚಿತ್ತವೇ ಆಭರಣವೆಂಬಂತೆ ಅವಳು ಗ್ರಹಿಸುತ್ತಿದ್ದಳೆಂದೂ ಆಕೆಗೆ ರಾಜ್ಯಲಕ್ಷ್ಮಿ ಯೇ ಒಡನಾಡಿಯಾಗಿದ್ದಳೆಂದೂ ಇದರ ಭಾವ. ಇಲ್ಲಿ ಅರಸಿತನವನ್ನು ಮೆರೆಯಿಸುವಾಗ ರಾಣಿಗೆ ಬೇಕಾದ ಅಂಗರಕ್ಷಕರ, ಆಭರಣಗಳ, ಜತೆಗಾರರ ಪ್ರಸ್ತಾವವಿರುವುದನ್ನು ಆಲಂಕಾರಿಕವಾಗಿ ಹೇಳಲಾಗಿದೆ.
೩೦. ಕಾಮನಿಗೆ ಕಬ್ಬೇ ಬಿಲ್ಲೆಂದೂ ಆ ಬಿಲ್ಲಿಗೆ ಎಳೆಯ ಮೊಗ್ಗೆಗಳೇ ಕಟ್ಟಿದ ಹಗ್ಗವೆಂದೂ ಅದರಿಂದ ಹೊರಹೊಮ್ಮುವ ಬಾಣವು ಎಲ್ಲ ಜನರ ಮನಸ್ಸನ್ನೂ ಮೋಹಗೊಳಿಸುವುದೆಂದೂ ಪ್ರಸಿದ್ದಿಯಿದೆ. ಯಶೋಧರನು ಜನರಿಗೆಲ್ಲ ಅತ್ಯಂತ ಮೋಹಕನಾಗಿದ್ದನೆಂದು ಅಭಿಪ್ರಾಯ.
೩೧. ದೀವ ಎಂದರೆ ಒಂದು ಬಗೆಯಲ್ಲಿ ದೀಪ ಎಂಬುದರ ತದ್ಭವವೆನ್ನಬಹುದು. ದೀಪವು ಪತಂಗಗಳನ್ನು ಆಕರ್ಷಿಸುತ್ತದೆ; ಅನಂತರ ಕೊಲ್ಲುತ್ತದೆ. ಹಾಗೆಯೇ ಕಾಡಿನ ಪ್ರಾಣಿಗಳನ್ನು ಆಕರ್ಷಿಸಲು ಬೇರೆ ಪ್ರಾಣಿಗಳನ್ನು ಬಳಸುತ್ತಾರೆ. ಇದಕ್ಕೆ ದೀವಗಳೆಂದು ಹೆಸರು. ಇಲ್ಲಿ ಯಶೋಧರನು ಅಮೃತಮತಿಯಿಂದ ಆಕರ್ಷಿತನಾಗಿದ್ದಾನೆ; ಮುಂದೆ ಕೊಲೆಯಾಗುತ್ತಾನೆ ಎಂಬ ಸೂಚನೆಯಿದೆ.
೩೨. ಮನೆಗೆ ಉಡು ಅಥವಾ ಕಾಡು ಪಾರಿವಾಳ ಪ್ರವೇಶಿಸಿದರೆ ಆ ಮನೆಯಲ್ಲಿ ವಾಸಮಾಡುವವರಿಗೆ ಅನಿಷ್ಟವು ಸಂಭವಿಸುತ್ತದೆ ಎಂದು ಹಿಂದಿನಿಂದ ಜನ ನಂಬಿದ್ದಾರೆ. ಅದರಂತೆ ಆ ಮನೆಯನ್ನು ಬಿಟ್ಟು ತೊಲಗುತ್ತಾರೆ. ಇಲ್ಲಿ ಯಶೌಘನ ಮುಖವೆಂಬ ಅರಮನೆಗೆ ನರೆಯೆಂಬ ಕಾಡು ಪಾರಿವಾಳವು ಹೊಕ್ಕಿದೆ ಎಂದರೆ, ಅವನ ಮುಖದಲ್ಲಿ ನರೆಗೂದಲು ಕಾಣಿಸಿದೆ. ಆದುದರಿಂದ ಆ ಮುಖದಲ್ಲಿ ಹೆಂಗುಸರ ಕಡೆಗೆ ದೃಷ್ಟಿ ಹಾಯಿಸುವಿಕೆ ಎಂಬ ಅರಸನು ಉಳಿಯಲು ಸಾಧ್ಯವಿಲ್ಲ, ಎಂದರೆ ವಯಸ್ಸು ಮೀರಿದಾಗ ಇಂದ್ರಿಯಾಕರ್ಷಣೆಗೆ ಒಳಗಾಗುವುದು ಸರಿಯಲ್ಲ. ಹೀಗೆಣಿಸಿ ಯಶೌಘನು ಇಂದ್ರಿಯಾ ಕರ್ಷಣೆಗಳನ್ನು ತ್ಯಜಿಸಿದನು.
೩೩. ತಂದೆಯ ನಲ್ಲೆಯನ್ನು ಮಗನು ಕೂಡಿಕೊಂಡನೆಂದರೆ ಅವನು 'ತಾಯಿ ಗಂಡನೆನಿಸುತ್ತಾನೆ. ಅಂತಹ ಕೆಟ್ಟ ನಡತೆಯವನ ಒಡನಾಟದಲ್ಲಿರುವುದೂ ಕೆಟ್ಟದೇ. ಈ ಎಣಿಕೆಯಿಂದ ಯಶೋಧರನ ಕೀರ್ತಿ ದಿಗಂತಗಳವರೆಗೂ-ಬಹುದೂರ-ಹೋಯಿತಂತೆ.
೩೪. ಯಶೋಧರನು ತನ್ನ ತೇಜಃಪ್ರಭಾವದಿಂದ ಬೇರೆ ರಾಜರನ್ನು ಸೋಲಿಸಿದನು. ಆ ಅರಸನು ಭೂಮಿಗೆ ಪತಿಗಳೆನ್ನಿಸಿ (ಗಂಡಗಾಳಿಕೆಯಿಂದ) ಇದ್ದರು. ಹೀಗೆ ಹಲವರು ಪತಿಗಳಾಗಿದ್ದುದರಿಂದ ವಸುಂಧರೆ (ಭೂಮಿ) ನಿಸ್ತೇಜಳಾಗಿದ್ದಳು. ಅವನಿಗೀಗ ಯಶೋಧರನ ತೇಜಸ್ಸಿನಿಂದ ತೇಜಸ್ಸು ತುಂಬಿತು. ಅವಳು ಅವನಲ್ಲಿ ಅನುರಾಗವನ್ನು ತೋರಿಸಿದಳು. ಯಶೋಧರನು ವಸುಂಧರೆಗೆ ಒಬ್ಬನೇ ಪತಿಯೆನ್ನಿಸಿದನು.