________________
`೪ | ಪಂಪಭಾರತ ಚಾಳುಕ್ಯರಾಜರ ವಿಶೇಷ ಪ್ರೋತ್ಸಾಹದಿಂದ ಕನ್ನಡರತ್ನತ್ರಯರೆಂದು ಪ್ರಸಿದ್ಧರಾದ ಪಂಪ ಪೊನ್ನ ರನ್ನರು ವೀರರಸಪ್ರಧಾನವಾದ ರಾಮಾಯಣ ಭಾರತ ಕಥೆಗಳ ಮೂಲಕ ತಮ್ಮ ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿಸಿದರೂ ಶಾಂತಿರಸಪ್ರಧಾನವಾದ ತೀರ್ಥಂಕರರ ಚರಿತ್ರೆಗಳನ್ನು ರಚಿಸಿ ತಾವು ಜಿನಸಮಯದೀಪಕರಾದುದೂ ಇದಕ್ಕೆ ಪ್ರತ್ಯಕ್ಷಸಾಕ್ಷಿ. ಇವರ ಕೃತಿಗಳ ಮಣಿವೆಳಗಿನಿಂದಲೇ ಆ ಕಾಲದ ಸಾಹಿತ್ಯಪ್ರಪಂಚವು ಜ್ವಾಜ್ವಲ್ಯಮಾನವಾಗಿದೆ
ಪಂಪ: ಕನ್ನಡರತ್ನತ್ರಯರಲ್ಲಿ ಮೊದಲಿಗ ಪಂಪ, ಕಾಲದೃಷ್ಟಿಯಿಂದಲ್ಲದಿದ್ದರೂ ಯೋಗ್ಯತೆಯ ದೃಷ್ಟಿಯಿಂದ ಈತನು ಕನ್ನಡದ ಆದಿಕವಿ. ಅಲ್ಲದೆ ಕವಿವೃಷಭ, "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪಂ' ಎಂಬ ನಾಗರಾಜನ ಉಕ್ತಿಯು ಅಕ್ಷರಶಃ ಸತ್ಯ. ಈತನ ಕಾವ್ಯಗಳು 'ಮುನ್ನಿನ ಕಬ್ಬಗಳೆಲ್ಲವನು ಇಕ್ಕಿ ಮೆಟ್ಟಿದು' ದಲ್ಲದೆ ಅಲ್ಲಿಂದ ಮುಂದೆ ಬಂದವುಗಳಿಗೆ ಮಾರ್ಗದರ್ಶಕವಾದುವು. ಕನ್ನಡಿಗರ ಸುದೈವದಿಂದ ಪಂಪನು ತನ್ನ ಕಾವ್ಯಗಳಲ್ಲಿ ತನ್ನ ಪೋಷಕನ, ತನ್ನ ಮತ್ತು ತನ್ನ ಕಾವ್ಯಗಳ ವಿಷಯಕವಾದ ಪೂರ್ಣ ವಿವರಗಳನ್ನು ಕೊಟ್ಟಿದ್ದಾನೆ. ಅವುಗಳ ಸಹಾಯದಿಂದ ವಾಚಕರು ಕೃತಿಗಳ, ಕೃತಿಕರ್ತನ, ಮತ್ತು ಕೃತಿಭರ್ತನ ಪೂರ್ಣ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗಿದೆ.
ಪೂರ್ವಸಮುದ್ರತೀರದಲ್ಲಿದ್ದ ತೆಲುಗುದೇಶಕ್ಕೆ ಸೇರಿದ ವೆಂಗಿಪುವಿನಲ್ಲಿ ವಸಂತ, ಕೊಟ್ಟೂರು, ನಿಡುಗುಂದಿ, ವಿಕ್ರಮಪುರ ಎಂಬ ಅಗ್ರಹಾರಗಳಿದ್ದುವು. ಅವುಗಳಲ್ಲಿ ಅಗ್ರಗಣ್ಯನೂ ಊರ್ಜಿತಪುಣ್ಯನೂ ವತ್ಸಗೋತ್ರೋದ್ಭವನೂ ನಯಶಾಲಿಯೂ ಸಕಲಶಾಸ್ತ್ರಾರ್ಥಮತಿಯೂ ಆದ ಮಾಧವಸೋಮಯಾಜಿ ಎಂಬ ಬ್ರಾಹ್ಮಣನಿದ್ದನು. ಆತನು ಅನೇಕ ಯಜ್ಞಗಳನ್ನು ಮಾಡಿ ಸರ್ವಕ್ರತುಯಾಜಿಯಾದನು. ಆತನ ಯಜ್ಞಕುಂಡಗಳಿಂದ ಹೊರಟ ಹೋಮಧೂಮವು ದಿಗ್ವನಿತೆಯರಿಗೆ ಕೃತಕಕುರುಳಿನಂತೆಯೂ ತ್ರಿಭುವನಕಾಂತೆಗೆ ಕಂಠಾಭರಣದಂತೆಯೂ ಶೋಭಿಸುತ್ತಿದ್ದರೂ ಅವುಗಳಲ್ಲಿ ಆಹುತಿ ಮಾಡಿದ ಪಶುಹತ್ಯಾದೋಷದಿಂದ ಆತನ ಧವಳಕೀರ್ತಿ ಕರಿದಾಯಿತೆಂದು ಕವಿಯ ಕೊರಗು. ಆತನ ಮಗ ಅಭಿಮಾನಚಂದ್ರ. ಇವನು ಅರ್ಥಿಗಳು ಯಾಚಿಸಿದ ಸಾರವಸ್ತುಗಳನ್ನೆಲ್ಲ ನಿರ್ಯೋಚನೆಯಿಂದಿತ್ತು ಗುಣದಲ್ಲಿ ಪುರುಷೋತ್ತಮನನ್ನೂ ಮೀರಿಸಿದನು. ಭುವನಭವನಖ್ಯಾತನಾದ ಅಭಿಮಾನಚಂದ್ರನ ಮಗ ಕೊಮರಯ್ಯ. ಈತನು ವೇದವೇದಾಂಗಪಾರಗ, ಪುರಾತನಚರಿತ. ಈತನಿಗೆ ಗುಣಮಣಿರತ್ನಾಕರನೂ ಅಜ್ಞಾನತಮೋನೀಕರನೂ ಆದ ಅಭಿರಾಮದೇವರಾಯನೆಂಬುವನು ತನಯ. ಈತನು 'ಜಾತಿಯೊಳೆಲ್ಲ ಉತ್ತಮಜಾತಿಯ ವಿಪ್ರಕುಲಂಗೆ ನಂಬಲೇಮಾತೋ ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತಜ್ಞಾತಿಯನುತ್ತರೋತ್ತರಂಮಾಡಿ ನೆಗಚ್ಚೆದನ್.' ಇತ್ತೀಚೆಗೆ ಲಬ್ದವಾದ ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದ ಅಭಿರಾಮದೇವರಾಯನಿಗೆ ಭೀಮಪಯ್ಯನೆಂಬ ಹೆಸರೂ ಇದ್ದಂತೆ ತೋರುತ್ತದೆ. ಪಂಪನ ತಾಯಿ ಅಣ್ಣಿಗೇರಿಯ ಸಿಂಘಣ ಜೋಯಿಸನ ಮಗಳಾದ ಅಬ್ಬಣಬ್ಬೆ, ಇವರ ಮಗನೇ