________________
ಉಪೋದ್ಘಾತ | ೪೫ ಗುಣದಿಂದಲೇ ಪ್ರಪಂಚದಲ್ಲಿ ಆಚಂದ್ರಾರ್ಕವಾದ ಕೀರ್ತಿಯನ್ನು ಪಡೆದಿದ್ದಾರೆ. ಪಂಪನು ಬಹುಶಃ ತನ್ನ ಕಾಲದಲ್ಲಿ ಪ್ರಧಾನ ಮೌಲ್ಯಗಳಾಗಿದ್ದಿರಬಹುದಾದ ಛಲ, ನನ್ನಿ, ಗಂಡು, ಬಲ, ಉನ್ನತಿ, ಚಾಪವಿದ್ಯೆ, ಸಾಹಸ, ಧರ್ಮ ಈ ಗುಣಗಳಿಗೆ ಪ್ರಸಿದ್ಧ ಪ್ರತಿನಿಧಿಗಳಾಗಿದ್ದ ದುರ್ಯೊಧನ, ಕರ್ಣ, ಭೀಮ, ಶಲ್ಯ, ಭೀಷ್ಮ ದ್ರೋಣ, ಅರ್ಜುನ ಮತ್ತು ಧರ್ಮರಾಜರನ್ನು ಹೆಸರಿಸಿ ಅವರಿಂದ ಭಾರತವು ಲೋಕಪೂಜ್ಯವಾಗಿದೆ ಎಂದು ಹೇಳಿದ್ದಾನೆ. ಇವರೊಡನೆ ಕೃಷ್ಣ, ಅಭಿಮನ್ಯು, ಘಟೋತ್ಕಚ, ಶ್ವೇತ ಮೊದಲಾದವರ ಅದ್ಭುತ ವ್ಯಕ್ತಿತ್ವಗಳು ಕಾವ್ಯದಲ್ಲಿ ಮೂಡಿ ಬಂದಿವೆ. ಇವರಲ್ಲಿ ಪ್ರಧಾನವಾದ ಕೆಲವರ ಪಾತ್ರ ಚಿತ್ರಣವನ್ನು ಪರಿಶೀಲಿಸಬಹುದು.
ಮಹಾಭಾರತದ ಪ್ರಧಾನ ವ್ಯಕ್ತಿ ಶ್ರೀಕೃಷ್ಣ. ಆತನ ಹೆಸರನ್ನು ವಾಚ್ಯವಾಗಿ ಪಂಪನು ಎತ್ತಿ ಸೂಚಿಸದಿರುವುದಕ್ಕೆ ಕಾರಣಗಳನ್ನು ಊಹಿಸುವುದು ಸುಲಭವಲ್ಲಿ ಹೆಸರಿಸದಿದ್ದರೂ ಆತನ ಕೈವಾಡ, ಪ್ರಭಾವ, ಪ್ರಾಮುಖ್ಯ ಪಂಪಭಾರತದಲ್ಲಿ ಎಲ್ಲಿಯೂ ಕಡಿಮೆಯಾಗಿಲ್ಲ. ಆತನಿಲ್ಲದಿದ್ದರೆ ಭಾರತದ ಕಥೆಯೇ ನಡೆಯುತ್ತಿರಲಿಲ್ಲವೆಂಬಷ್ಟು ಸ್ಥಾನವನ್ನು ಕವಿ ಅವನಿಗೆ ಕಲ್ಪಿಸಿದ್ದಾನೆ. 'ಮಮ ಪ್ರಾಣಾ ಹಿ ಪಾಂಡವಾಃ' ಎಂಬುದಾಗಿ ಮೂಲಭಾರತದಲ್ಲಿ ಬರುವ ಆತನ ಉಕ್ತಿಗೆ ಇಲ್ಲಿ ಊನ ಬಂದಿರುವಂತೆ ಕಾಣುವುದಿಲ್ಲ. ಬ್ರೌಪದೀಸ್ವಯಂವರದಲ್ಲಿ ಪಾಂಡವರನ್ನು ಮೊದಲು ಕಂಡ ಆತನು ಅರ್ಜುನನ ಪಟ್ಟಾಭಿಷೇಕದವರೆಗೆ ಉದ್ದಕ್ಕೂ ಪಾಂಡವರ ಪ್ರಧಾನ ಶಕ್ತಿಯಾಗಿದ್ದಾನೆ. ಪಾಂಡವರು ಯಾವ ಕೆಲಸ ಮಾಡಬೇಕಾದರೂ ಅವನನ್ನು ವಿಚಾರಿಸದೆ ತೊಡಗುವುದಿಲ್ಲ. ಅವರ ಎಲ್ಲ ಸಹಾಯ ಸಂಪತ್ತುಗಳೂ ವಿಪತ್ಪರಿಹಾರಗಳೂ ಅವನಿಂದಲೇ ಉಂಟಾಗುವುವು. ಸುಭದ್ರಾಪರಿಣಯಕ್ಕೆ ಕಾರಣನಾದವನು ಆತನು. ರಾಜಸೂಯವನ್ನು ನಡೆಸಿದವನು ಆತನು, ಖಾಂಡವದಹನ ಪ್ರಸಂಗದಲ್ಲಿ ನೆರವಾಗಿದ್ದವನು, ಪಾಶುಪತಾದಿ ಅಮೌಲ್ಯಅಸ್ತಗಳನ್ನು ದೊರಕಿಸಿದವನು. ದುರ್ಯೋಧನನಿಗೆ ದೂತನಾಗಿ ಹೋಗಿ ಸಂಧಿಗಾಗಿ ಪ್ರಯತ್ನಪಟ್ಟವನು ಅವನೇ. ಭೇದೋಪಾಯದಿಂದ ಕರ್ಣನ ಶಕ್ತಿಯನ್ನು ಕುಂದಿಸಿದವನೂ, ಕುಂತಿಯ ಮೂಲಕ ಪಾಂಡವರಿಗೆ ಅವನಿಂದ ರಕ್ಷಣೆಯನ್ನು ದೊರಕಿಸಿದವನೂ ಅವನೇ. ಯುದ್ದದಲ್ಲಿ ವೀರಾಧಿವೀರರಾದ ಭೀಷ್ಮ ದ್ರೋಣ ಕರ್ಣ ಶಲ್ಯ ಮೊದಲಾದ ಎಲ್ಲ ನಾಯಕರನ್ನೂ ಜಯಿಸುವ ಉಪಾಯವನ್ನು ಹೇಳಿಕೊಟ್ಟವನೂ ಅವನೇ. ಪಾಂಡವರಿಗೆ ಯುದ್ಧದಲ್ಲಿ ಉಂಟಾದ ಎಲ್ಲ ವಿಪತ್ತುಗಳೂ ಅವನಿಂದಲೇ ಪರಿಹಾರವಾದುವು. ಅವನು ಅಜಿತ, ಅನಂತ, ಮಧು ಮಥನ, ನಾರಾಯಣ ಎಂಬುದು ಉಭಯಪಕ್ಷಗಳಿಗೂ ತಿಳಿದಿತ್ತು. ಹಾಗೆಯೇ ಎಲ್ಲರಿಗೂ ಅವನಲ್ಲಿ ಪೂರ್ಣವಾದ ಭಕ್ತಿಯಿತ್ತು. ಅವನ ಉಪದೇಶದಂತೆ ನಡೆದುಕೊಳ್ಳಿ ಎಂದು ದ್ರೋಣ ಭೀಷ್ಮಾದಿಗಳು ಪಾಂಡವರಿಗೆ ತಿಳಿಸುತ್ತಾರೆ. ದುರ್ಯೊಧನನಿಗೂ ಕೂಡ ಅವನ ನೆರವು ಅವಶ್ಯಕವೆಂದು ತಿಳಿದಿತ್ತು. ಅವನನ್ನು ಗೆಲ್ಲುವುದು ಕಷ್ಟಸಾಧ್ಯವೆಂಬ ಅರಿವೂ ಇತ್ತು ಎಂದು ಸ್ಪಷ್ಟವಾಗಿ ತಿಳಿಸಿದನು. ಕೊನೆಗೆ ಸಾಯುವಾಗ 'ಆಗದು ಪಾಂಡವರಂ ಗೆಲಲ್ ಪುರಾತನಪುರುಷಂ ಮುರಾರಿ ಕೆಲದೊಳ್