________________
೧೮ | ಪಂಪಭಾರತಂ ನಿರತನಾದನು. ಆದರೂ ಬಾಹುಬಲಿಯ ಮನಸ್ಸಿನಲ್ಲಿ ತಾನು ಭರತನ ನೆಲದಲ್ಲಿ ನಿಂತಿರುವೆನೆಂಬ ಚಿಂತೆಯಿಂದ ಶಾಂತಿಯುತ್ಪನ್ನವಾಗಿರಲಿಲ್ಲ. ಅದನ್ನರಿತು ಭರತನೇ ಬಂದು 'ಈ ನೆಲನೀನೆನಗಿತ್ತ ನೆಲ, ನಿನ್ನದೇ ವಿನಾ ನನ್ನದಲ್ಲ' ಎಂದು ಭಕ್ತಿಪೂರ್ವಕವಾಗಿ ತಿಳಿಸಿದ ಮೇಲೆ ಶಾಂತಚಿತ್ತನಾಗಿ ತಪೋನಿಷ್ಠನಾದನು.
ಭರತನ ಬಾಹುಬಲದ ಆಡಂಬರವೆಲ್ಲಿ ಬಾಹುಬಲಿಯ ವೈರಾಗ್ಯದ ವೈಭವವೆಲ್ಲಿ? ಧರ್ಮಚಕ್ರದ ದಿಗ್ವಿಜಯದ ಮುಂದೆ ಚಕ್ರವರ್ತಿಯ ದಿಗ್ವಿಜಯ ಬೊಬ್ಬುಳಿಕೆ; ನಿಸ್ಸಾರ. ಮುಂದೆ ಭರತನು ಅನೇಕ ಕಾಲ ರಾಜ್ಯವಾಳುತ್ತಾನೆ. ವಿಪ್ರವರ್ಣವನ್ನು ಸ್ಥಾಪಿಸಿ ಅವರ ಕರ್ಮಾದಿಗಳನ್ನು ನಿಷ್ಕರ್ಷೆ ಮಾಡುತ್ತಾನೆ. ಆದರೂ ಜೈನಧರ್ಮದ ಅವನತಿಯ ಅರಿವಾಗುತ್ತದೆ. ಅಷ್ಟರಲ್ಲಿ ಆದಿತೀರ್ಥಂಕರನ ಪರಿನಿರ್ವಾಣಕಲ್ಯಾಣ ಸಮೀಪಿಸುತ್ತದೆ. ಭರತನು ಅಲ್ಲಿಗೆ ಹೋಗಿ ಜಿನಸ್ತೋತ್ರ ಮಾಡುತ್ತಾನೆ. ಧರ್ಮದ ಸಾರವನ್ನು ತಿಳಿಯುತ್ತಾನೆ. ವಿಯೋಗಾಗ್ನಿಯಿಂದ ಬೇಯುತ್ತಿರುವ ಭರತನನ್ನು ವೃಷಭಸೇನಾಗ್ರಹಣಿಗಳು ಸಮಾಧಾನ ಮಾಡುತ್ತಾರೆ. ಭರತನು ತನ್ನ ರಾಜ್ಯವನ್ನು ತ್ಯಜಿಸಿ ತಪೋನಿರತನಾಗಿ ಮೋಕ್ಷಲಕ್ಷ್ಮೀಪತಿಯಾಗುತ್ತಾನೆ.
ಇದುವರೆಗಿನ ಒಂದು ವಿಹಾರವಿಮರ್ಶೆಯಿಂದ ಪಂಪನ ಕೈಚಳಕ ಯಥೋಚಿತವಾಗಿ ಅರ್ಥವಾಗುತ್ತದೆ. ಧರ್ಮ ಮತ್ತು ಕಾವ್ಯಧರ್ಮಗಳ ಮೇಳನ ಪರಿಸ್ಪುಟವಾಗುತ್ತದೆ. ಜೈನರಿಗೆ ಅಲ್ಲದೇ ಜೈನೇತರರಿಗೂ ಅದರ ಸೊಬಗು ಮನವರಿಕೆಯಾಗುತ್ತದೆ. ಆದಿಪುರಾಣದಲ್ಲಿ ಪಂಪನು ಮಾಣಿಕ್ಯಜಿನೇಂದ್ರಬಿಂಬವನ್ನು ಕಡೆದು ದಿವ್ಯಚೈತ್ಯವನ್ನು ಕಟ್ಟಿರುವುದು. ನಿಜ, ಅದಕ್ಕಿಂತಲೂ ಸಾಹಿತ್ಯೋಪಾಸಕರಿಗೆ ಆತನು ನಿರ್ಮಿಸಿರುವ ಭವ್ಯರಸಮಂದಿರಗಳು ಚಿರಸ್ಥಾಯಿಯಾಗಿ ಸರ್ವಾದರಣೀಯವಾಗಿವೆ. ಇದನ್ನೇ ಪಂಪನು ಮುಂದಿನ ಪದ್ಯಗಳಲ್ಲಿ ಬಹು ಸ್ವಾರಸ್ಯವಾಗಿಯೂ ವಿಸ್ತಾರವಾಗಿಯೂ ವಿಶದಪಡಿಸಿದ್ದಾನೆ.
- ಪಂಪಭಾರತ : ಇದು ಪಂಪನ ದ್ವಿತೀಯ ಕೃತಿ. ಇದಕ್ಕೆ ವ್ಯಾಸ ಮಹಾಮುನಿಯ ಸಂಸ್ಕೃತ ಮಹಾಭಾರತವೇ ಮೂಲವೆಂಬುದು ಅವನೇ ಹೇಳಿಕೊಂಡಿರುವ “ವ್ಯಾಸಮುನೀಂದ್ರ ರುಂದ್ರವಚನಾಮೃತವಾರ್ಧಿಯನೀಸುವೆಂ' ಎಂಬ ವಾಕ್ಯದಿಂದಲೇ ಪ್ರತಿಪಾದಿತವಾದರೂ ಪಂಪನ ಕಾಲಕ್ಕೆ ಹಿಂದೆ ಕೆಲವು ಕನ್ನಡ ಭಾರತಗಳಿದ್ದು ಅವು ಪಂಪನ ಮೇಲೆ ಪ್ರಭಾವ ಬೀರಿರಬಹುದೆಂದು ಊಹಿಸಬಹುದಾಗಿದೆ. ನಾಗವರ್ಮನ “ಕಾವ್ಯಾವಲೋಕನ'ದಲ್ಲಿ ಲಕ್ಷವಾಗಿ ಕೊಟ್ಟಿರುವ ಕೆಲವು ಪದ್ಯಗಳು ಯಾವುದೋ ಕನ್ನಡ ಭಾರತದಿಂದ ಉದ್ದರಿಸಲ್ಪಟ್ಟುದಾಗಿ ಕಾಣುತ್ತದೆ. ಅಲ್ಲದೆ ಪಂಪನೇ 'ಮುಂ ಸಮಸ್ತ ಭಾರತಮನಪೂರ್ವಮಾಗೆ ಪೇಟ್ಟಿ ಕವೀಶ್ವರರಿಲ್ಲ' ಎಂದು ಹೇಳಿ ತನ್ನ ಭಾರತವನ್ನು 'ಸಮಸ್ತ ಭಾರತಂ' ಎಂದು ಹೇಳಿಕೊಂಡಿರುವುದರಿಂದ ಇವನಿಗೆ ಹಿಂದೆ ಕೆಲವರು ಭಾರತದ ಕೆಲಕೆಲ ಭಾಗಗಳನ್ನು ಕನ್ನಡದಲ್ಲಿ ರಚಿಸಿದ್ದರೆಂದೂ ಸಂಪೂರ್ಣವಾಗಿ ಭಾರತವನ್ನು ರಚಿಸಿದವರಲ್ಲಿ ಇವನೇ ಮೊದಲಿಗನೆಂದೂ ಊಹಿಸಬಹುದಾಗಿದೆ. 'ಕವಿವ್ಯಾಸನೆಂಬ