________________
ಆದಿಕವಿ ನಾಡೋಜ ಪಂಪನಿಂದ ಹಂಪನಾ ವರೆಗೆ ಬೆಳೆದು ಬಂದ ಕನ್ನಡ ಸಾಹಿತ್ಯ ಎನ್ನುತ್ತಾರೆ ನಾಡೋಜ ಹಂಪನಾ ಅಭಿಮಾನಿಗಳು. ಹಂಪನಾ ಇದ್ದಕಡೆ ಜನ. ಆಬಾಲವೃದ್ಧರಾಗಿ ಬೆಲ್ಲಕ್ಕೆ ಇರುವೆ ಮುತ್ತುವಂತೆ ಸೇರುತ್ತಾರೆ. ತರುಣರೊಂದಿಗೆ ತರುಣರಾಗಿ, ಮುಪ್ಪಿನವರೊಂದಿಗೆ ಮುದುಕರಾಗಿ, ಹಾಲಲ್ಲಿ ಸಕ್ಕರೆಯಂತೆ ಬೆರೆಯುತ್ತಾರೆ. ಅವರು ಪ್ರಾಧ್ಯಪಕರಾಗಿ ಬೆಳೆದು ಇಂದು ವಿದ್ವಾಂಸರೆನಿಸಿಕೊಳ್ಳುವ ವರೆಗಿನ ಬೆಳವಣಿಗೆಯನ್ನು ನಾನು ಕಂಡಿದ್ದೇನೆ. ವೃತ್ತಿಯಿಂದ ಪ್ರಾಧ್ಯಾಪಕರಾಗಿ ಅದಕ್ಕೆ ಪೂರಕವಾಗಿ ಸಂಶೋಧನಾ ಆಸಕ್ತಿಯನ್ನು ಆವಾಹಿಸಿಕೊಂಡು, ಕನ್ನಡ ಶಕ್ತಿ ಶಾರದೆಯ ಕೈಂಕರ್ಯದ ಫಲವಾಗಿ ಏರಿದ ಎತ್ತರ, ಮುಟ್ಟಿದ ಗುರಿ, ಮಾಡಿದ ಸಾಧನೆ ಅವರ ಹೋರಾಟದ ಬದುಕಿನ ವೀರಗಾಥೆಗಳು. ಸದಾ ತಾರುಣ್ಯದ ಉತ್ಸಾಹ ಲವಲವಿಕೆಗಳನ್ನು ದೈಹಿಕ ವ್ಯಕ್ತಿತ್ವವನ್ನು ಒಂದೇ ರೀತಿಯಲ್ಲಿ ರಕ್ಷಿಸಿಕೊಂಡು ಬಂದು ಎಪ್ಪತ್ತನಾಲ್ಕರ ಪ್ರಾಯದಲ್ಲಿ ಇಪ್ಪತ್ತರ ಯುವಕನಂತೆ ಉಲ್ಲಾಸದಿಂದಿರುವ ಹಂಪನಾರವರು ಹೀಗೇನೆ ಆರೋಗ್ಯಪೂರ್ಣವಾಗಿ ಇನ್ನಷ್ಟುಕಾಲ ಬಾಳಲಿ. ಅವರಿದ ಇನ್ನಷ್ಟು ಸಾಹಿತ್ಯದ ಕೆಲಸಗಳು ಆಗಲಿ ಹಾರೈಸೋಣ. ಅವರಲ್ಲಿರುವ ಸರಳತೆ, ಸಜ್ಜನಿಕೆ, ಸತ್ಸಂಗ, ಮೆಲ್ವಾತು, ಸತ್ಯಂಗ ಸಲ್ಲಾಪಗಳು, ಅಸ್ಕಲಿತ ವಾಗಿತೆಗಳು ಚಿರಂತನವಾಗಿ ಉಳಿಯಲಿ, ಕ್ರಿಯಾಶೀಲತೆ, ಸಾಹಿತ್ಯ ನಿರ್ಮಿತಿ ಮತ್ತು ವಾಲ್ಮೀತೆಗಳ ತ್ರಿವೇಣಿ ಸಂಗಮವಾಗಿರುವ ಹಂಪನಾರವರು ಒಂದು ಅಪೂರ್ವ ರಸಾನುಭವ, ಉತ್ಸಾಹದ ಚಿಲುಮೆ. ಬದುಕಿನಲ್ಲಿ ಯಶಸ್ಸಿಗೆ ನೈಪುಣ್ಯವೊಂದೇ ಸಾಲದು, ಪುಣ್ಯವೂ ಬೇಕು. ಅವೆರಡನ್ನೂ ಪಡೆದು ಧನ್ಯರಾದವರು ನಮ್ಮ ಹಂಪನಾರವರು. ಸದಾ ಲವಲವಿಕೆಯಲ್ಲಿರುವ “ಸಫಾರಿಧಾರಿ” ನಾಡೋಜ ಹಂಪನಾರವರು ಪಂಪನಂತೆಯೇ ಕೀರ್ತಿವಂತರಾಗಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇನೆ.
*
-
ಎಂದು
ಡಿ. ವೀರೇಂದ್ರ ಹೆಗ್ಗಡೆಯವರು.