________________
೪೮ / ಪರಿಪಭಾರತಂ
ಹಾಗೆಂದ ಮಾತ್ರಕ್ಕೆ ಅವನಷ್ಟು ಪ್ರಧಾನವಾದ ಇತರ ಪಾತ್ರಗಳಿಗೆ ಪಂಪನು ಸೂಕ್ತಸ್ಥಾನವನ್ನು ದೊರಕಿಸಿಲ್ಲವೆಂದು ತಿಳಿಯಬೇಕಿಲ್ಲ. ಭಾರತದ ಕಥೆಯಲ್ಲಿ ಅರ್ಜುನನಷ್ಟೆ ಪ್ರಾಶಸ್ತ್ರವುಳ್ಳವನು ಭೀಮಸೇನ. ಕೆಲವೆಡೆಗಳಲ್ಲಿ ಅವನ ಪಾತ್ರ ಅರ್ಜುನನಿಗಿಂತ ಹೆಚ್ಚು ಉಜ್ವಲವಾಗಿದೆ. ವಾಸ್ತವವಾಗಿ ಭಾರತಯುದ್ಧ ಮುಗಿದು ಪಾಂಡವರಿಗೆ ರಾಜ್ಯಪ್ರಾಪ್ತಿಯಾಗುವುದು, ದುರ್ಯೊಧನನ ಊರುಭಂಗ ಕಿರೀಟಭಂಗ ಪ್ರತಿಜ್ಞೆಗಳನ್ನು ಪೂರ್ಣ ಮಾಡುವುದರಿಂದ, ಅದು ಪೂರ್ಣವಾಗುವುದು ಭೀಮನಿಂದ. ಆದುದರಿಂದ ಪಂಪನು ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಭೀಮನ ಪೌರುಷಪ್ರದರ್ಶನದ ಸನ್ನಿವೇಶಗಳನ್ನೆಲ್ಲ ಪ್ರಭಾವಶಾಲಿಯಾಗುವ ಹಾಗೆ ವರ್ಣಿಸಿದ್ದಾನೆ. ಲಾಕ್ಷಾಗೇಹದಾಹ, ಹಿಡಿಂಬಾಸುರವಧೆ, ದ್ಯೋತಪ್ರಸಂಗದಲ್ಲಿನ ಭೀಷ್ಮಪ್ರತಿಜ್ಞೆ ಕೀಚಕವಧೆ, ಭಗದತ್ತ ಯುದ್ಧ ಸುಪ್ರತೀಕವಧೆ, ಜರಾಸಂಧವಧೆ, ದುಶ್ಯಾಸನ ರಕ್ತಪಾನ, ದುರ್ಯೊಧನನ ಊರುಭಂಗ, (ಗದಾಯುದ್ದ ವೇಣೀ ಸಂಹಾರ ಮೊದಲಾದೆಡೆಗಳಲ್ಲಿ ಅವನ ಸಾಹಸ ಎದ್ದು ಕಾಣುವುದು. ಅವನ್ನು ಓದುತ್ತಿರುವಾಗ ನಾವು 'ವಿಕ್ರಮಾರ್ಜುನ ವಿಜಯ' ವನ್ನೋದುತ್ತಿದ್ದೇವೆ ಎಂಬ ಅರಿವೇ ಮರೆವಾಗುವುದು.
ಭೀಮಾರ್ಜುನರ ಪಾತ್ರಗಳ ರಚನೆಯಲ್ಲಿ ಪಂಪನು ಅಷ್ಟು ಶ್ರಮಪಟ್ಟಿರುವಂತೆ ಕಾಣುವುದಿಲ್ಲ. ಏಕೆಂದರೆ ಈ ಪಾತ್ರಗಳ ವಿಷಯದಲ್ಲಿ ಮೂಲ ಭಾರತದಲ್ಲಿಯೇ ಸರಿಯಾದ ಸೌಷ್ಟವವಿದೆ. ದೈವಬಲವೂ ಅವರ ಕಡೆಯೇ ಇದೆ. ಧರ್ಮವೂ ಅವರನ್ನೇ ಆಶ್ರಯಿಸಿದೆ. ಅರ್ಜುನನಿಗೆ ಹೋಲಿಸಿರುವ ಅರಿಕೇಸರಿರಾಜನು ವೀರನೇ ಅಹುದು, ಮೂಲಭಾರತ ದಲ್ಲಿರುವಂತೆ ಇಲ್ಲಿಯ ಭೀಮಾರ್ಜುನರೂ ಆಗಾಗ ಕೃಷ್ಣನ ಬೆಂಬಲಕ್ಕೆ ಕಾಯುತ್ತ ಧರ್ಮದ ಹೆಸರಿನಲ್ಲಿ ಅಧರ್ಮದಲ್ಲಿಯೂ ಕಾಲಿಡುವುದುಂಟು. ಆಗ ಅವರು ವಾಚಕರ ಅಸಮ್ಮತಿಗೂ ಪಾತ್ರವಾಗುವ ಸಂಭವವುಂಟು. ಆಗ ಅವರಲ್ಲಿ ನಮ್ಮ ಪೂರ್ಣಸಹಾನುಭೂತಿ ಯಿರುವುದಿಲ್ಲ.
ಪ್ರತಿನಾಯಕರಾದ ಕರ್ಣ ದುರ್ಯೋಧನರು ಪಂಪನ ಹೃದಯವನ್ನು ಸೂರೆಗೊಂಡಿದ್ದಾರೆ. ಪಂಪನು ಅವರ ಪೌರುಷಕ್ಕೆ ಮೆಚ್ಚಿದ್ದಾನೆ. ಅವರ ದುಃಸ್ಥಿತಿಗೆ ಮರುಗಿದ್ದಾನೆ, ಸಹಾನುಭೂತಿಯಿಂದ ಕಣ್ಣೀರುಗರೆದಿದ್ದಾನೆ. ಅದರಲ್ಲಿಯೂ ಕರ್ಣನ ಸನ್ನಿ, ತ್ಯಾಗ, ಅಣುಗಳನ್ನು ಅತ್ಯತಿಶಯವಾಗಿ ಪ್ರಶಂಸಿಸಿದ್ದಾನೆ. ಅವನ ದೃಷ್ಟಿಯಲ್ಲಿ ಕರ್ಣನ ದುರಂತಕಥೆಯೆ ಭಾರತ, ಅದನ್ನೇ ಅವನು 'ಕರ್ಣಂಗೊಂಡಿತ್ತು ದಲ್ ಭಾರತಂ' ಎಂಬ ಅರ್ಜುನನ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾನೆ. ಕರ್ಣನಲ್ಲಿ ತನಗಿರುವ ಬಹು ಉಚ್ಚಭಾವವೂ ಸಹಾನುಭೂತಿಯೂ ವಾಚಕರಲ್ಲಿ ನಿರರ್ಗಳವಾಗಿ ಕೋಡಿವರಿವಂತೆ ಅವನ ಪಾತ್ರವನ್ನು ಚಿತ್ರಿಸಿದ್ದಾನೆ.
ಕರ್ಣನ ಕಥೆ, ಕರುಣದ ಕಥೆ. ಅವನೊಬ್ಬ ದುರಂತವ್ಯಕ್ತಿ. ಬಾಲೆಯೊಬ್ಬಳ ಹುಡುಗಾಟದ ಅವಿವೇಕದ ಫಲವಾಗಿ ಕರ್ಣನು ಜನಿಸಿದನು. ಕೊಡಗೂಸುತನದ ಭಯದಿಂದ ತಾಯಿ ನಿಧಾನಮನೀಡಾಡುವಂತೆ ಕೈಯ ಕೂಸನ್ನು ಗಂಗೆಯಲ್ಲಿ ಈಡಾಡಿದಳು.